ವಿಶ್ವಮಟ್ಟದಲ್ಲಿ ಪ್ರಚುರಪಡಿಸಲು ಯಕ್ಷಗಾನ ಸ್ಪರ್ಧೆ
ಲೇಖಕರು : ಉದಯವಾಣಿ
ಮ೦ಗಳವಾರ, ಮಾರ್ಚ್ 18 , 2014
|
ಮಾರ್ಚ್ 18, 2014
|
ವಿಶ್ವಮಟ್ಟದಲ್ಲಿ ಪ್ರಚುರಪಡಿಸಲು ಯಕ್ಷಗಾನ ಸ್ಪರ್ಧೆ
ಬೆಂಗಳೂರು :
ಕುಂಟಿಕಾನ ಮಠ ಲಿಮಿಟೆಡ್ ಸಂಸ್ಥೆ ಆಗಸ್ಟ್ನಲ್ಲಿ ಯಕ್ಷಗಾನ ಸ್ಪರ್ಧೆ ಏರ್ಪಡಿಸಿದ್ದು, ತೆಂಕು ಮತ್ತು ಬಡಗುತಿಟ್ಟು ಪ್ರಕಾರ ಗಳ 82 ಯಕ್ಷಗಾನ ತಂಡಗಳು ಭಾಗವಹಿಸಲಿವೆ.
ನಗರದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕುಂಟಿಕಾನ ಮಠ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಕುಂಟಿಕಾನ, ಕರಾವಳಿ ಪ್ರದೇಶಧ ಜೀವಾಳವಾಗಿರುವ ಯಕ್ಷಗಾನ ಕಲಾ ಪ್ರಕಾರವನ್ನು ವಿಶ್ವಮಟ್ಟದಲ್ಲಿ ಪ್ರಚುರ ಪಡಿಸುವುದು ಈ ಸ್ಪರ್ಧೆಯ ಉದ್ದೇಶ. ತೆಂಕುತಿಟ್ಟು ಹಾಗೂ ಬಡಗುತಿಟ್ಟು ಪ್ರಕಾರಗಳಿಗೆ ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗಿದೆ. ಈಗಾಗಲೇ 82 ಯಕ್ಷಗಾನ ತಂಡಗಳು ಸ್ಪರ್ಧೆಗೆ ಹೆಸರು ದಾಯಿಸಿಕೊಂಡಿವೆ ಎಂದು ತಿಳಿಸಿದರು.
ಆಗಸ್ಟ್ನಲ್ಲಿ ಅರ್ಹತಾ ಸುತ್ತಿನ ಸ್ಪರ್ಧೆಗಳಿಗೆ ಮಂಗಳೂರು ಮತ್ತು ಉಡುಪಿಯಲ್ಲಿ ಚಾಲನೆ ಸಿಗಲಿವೆ. ಸೆಮಿಫೈನಲ್ ಹಾಗೂ ಫೈನಲ್ ಸ್ಪರ್ಧೆಗಳು ಬೆಂಗಳೂರಿನಲ್ಲಿ ನಡೆಯಲಿವೆ. ಒಟ್ಟು 24 ದಿನ ನಡೆಯುವ ಸ್ಪರ್ಧೆಯಲ್ಲಿ 1100ಕ್ಕೂ ಹೆಚ್ಚು ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೆ ಸಂಸ್ಥೆಯ ವತಿಯಿಂದ 25 ಸಾವಿರ ರೂ. ಗೌರವಧನ ನೀಡಲಾಗುವುದು. ಫೈನಲ್ನಲ್ಲಿ ಗೆದ್ದ ತಂಡಕ್ಕೆ 10 ಲಕ್ಷ ರೂ., ರನ್ನರ್ ಅಪ್ ತಂಡಕ್ಕೆ 5 ಲಕ್ಷ ರೂ. ಬಹುಮಾನವಿದೆ. ಹಾಗೆಯೇ ಕಲಾವಿದರಿಗೆ ವೈಯಕ್ತಿಕ ನಗದು ಬಹುಮಾನ ನೀಡಲಾಗುತ್ತದೆ ಎಂದರು.
ಫೈನಲ್ನಲ್ಲಿ ಗೆದ್ದ ಎರಡೂ ಪ್ರಕಾರದ ತಂಡಗಳನ್ನು ಲಂಡನ್ ಪ್ರವಾಸಕ್ಕೆ ಕರೆದೊಯ್ಯಲಾಗುವುದು. ಅನಂತರ ಲಂಡನ್ನಲ್ಲಿ ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿ ಸುವ ಮೂಲಕ ವಿದೇಶಿಯರಿಗೆ ಕಲೆಯ ಪರಿಚಯ ಮಾಡಿಕೊಡಲಾಗುವುದು ಎಂದು ವಿವರಿಸಿದರು.
ಉತ್ತಮ ಭಾಗವತ, ಮದ್ದಳೆ, ಚೆಂಡೆ, ನೃತ್ಯ, ಅಭಿನಯ, ಮಾತುಗಾರಿಕೆ, ಹಾಸ್ಯ, ಸ್ತ್ರೀವೇಷ ಕಲಾವಿದರಿಗೆ ಪ್ರತ್ಯೇಕ ಬಹುಮಾನಗಳಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ನಿರ್ದೇಶಕ ಗಣೇಶ್ ಭಟ್, ಮೊ. 90359 13672 ಸಂಪರ್ಕಿಸಬಹುದು.
ಕೃಪೆ :
http://www.udayavani.com
|
|
|